ನಟೋರಿಯಸ್ ಕ್ರಿಮಿನಲ್ ಕಾಲಿಗೆ ಗುಂಡು ಹಾರಿಸಿದ ಹುಬ್ಬಳ್ಳಿ ಪೊಲೀಸರು

ಹುಬ್ಬಳ್ಳಿ: ನಗರದ ಹೊರವಲಯದ ಮನೆಗಳನ್ನೇ ಗುರಿಯಾಗಿಸಿಕೊಂಡು ಡಕಾಯಿತಿ ಮಾಡುತ್ತಿದ್ದ ಖತರ್ನಾಕ ಗ್ಯಾಂಗ್’ನ ಸದಸ್ಯನ ಕಾಲಿಗೆ ಗುಂಡಿಟ್ಟು ನೀಡಿ ಬಂಧಿಸುವಲ್ಲಿ ಧಾರವಾಡದ ವಿದ್ಯಾಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಶನಿವಾರ ತಡರಾತ್ರಿ ಧಾರವಾಡದ ನವಲೂರಿನಲ್ಲಿರುವ ವಿಕಾಸ್ ಕುಮಾರ ಎಂಬಾತರ ಮನೆಗೆ ನುಗ್ಗಿದ ಡಕಾಯಿತಿ ಗ್ಯಾಂಗ್ ದಂಪತಿಗಳಿಗೆ ಮನಬಂದಂತೆ ಥಳಿಸಿ, ಮನೆಯಲ್ಲಿದ್ದ ಮೌಲ್ಯಯುತ ವಸ್ತುಗಳನ್ನು ದೋಚಿ ಪರಾರಿಯಾಗಿತ್ತು.
ಈ ಬಗ್ಗೆ ದಂಪತಿಗಳು ಸ್ಥಳೀಯ ಪೋಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಅದರಂತೆ ರೌಂಡ್ಸ್’ನಲ್ಲಿದ್ದ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿ ಡಕಾಯಿತಿ ಗ್ಯಾಂಗ್ ಸೆರೆ ಹಿಡಿಯಲು ಬೆನ್ನು ಬಿದ್ದಿದೆ. ಈ ವೇಳೆ ನಟೋರಿಯಸ್ ಪಾಲಾ ವೆಂಕಟೇಶ್ವರ ಅಲಿಯಾಸ್ ಕಲ್ಯಾಣಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ. ಮತ್ತೆ ಕೆಲವರು ತಪ್ಪಿಸಿಕೊಂಡಿದ್ದಾರೆ.
ಹೀಗಾಗಿ ಬಂಧಿತನನ್ನು ತನಿಖೆಗೆ ಒಳಪಡಿಸಿದ ಸಂದರ್ಭದಲ್ಲಿ ತನ್ನೊಂದಿಗೆ ನಾಲ್ಕೈದು ಜನರು ಭಾಗಿಯಾಗಿರುವುದಾಗಿ ತಿಳಿಸಿ, ಬೆಳ್ಳಿಗ್ಗೆ ಗಾಮನಗಟ್ಟಿ ಇಂಡಸ್ಟ್ರಿಯಲ್ ಏರಿಯಾದ ಗಾರ್ಡನ್ ಸುತ್ತಮುತ್ತ ಸೇರುವುದಾಗಿ ಮಾಹಿತಿ ನೀಡಿದ್ದಾರೆ.
ಬಂಧಿತನ ಮಾಹಿತಿ ಆಧರಿಸಿ ಸ್ಥಳಕ್ಕೆ ಹೋದಾಗ ಪಾಲಾ ವೆಂಕಟೇಶ್ವರ ಅಲಿಯಾಸ್ ಕಲ್ಯಾಣಕುಮಾರ್ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗಲು ಮುಂದಾಗಿದ್ದಾನೆ.
ಈ ವೇಳೆ ವಿದ್ಯಾಗಿರಿಯ ಪಿಎಸ್ಐ ಪ್ರಮೋದ್ ಗಾಳಿಯಲ್ಲಿ ಎರಡು ಸುತ್ತಿನ ಫೈರಿಂಗ್ ಮಾಡಿದ್ದಾರೆ. ಅದಕ್ಕೂ ಬೆದರದೇ ಇದ್ದಾಗ ಅನಿವಾರ್ಯವಾಗಿ ಆರೋಪಿಯ ಎರಡು ಕಾಲಿಗೆ ಗುಂಡೆಟ್ಟು ನೀಡಿ ಬಂಧಿಸಿದ್ದಾರೆ.
ಸದ್ಯ ಆರೋಪಿಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಇದೇ ಕಾಲದಲ್ಲಿ ಗಾಯಗೊಂಡ ಪಿಎಸ್ಐ ಪ್ರಮೋದ್ ಹಾಗೂ ಸಿಬ್ಬಂದಿ ಆನಂದ್ ಬಡಿಗೇರ ಎಂಬಾತರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕಿಮ್ಸ್’ಗೆ ಭೇಟಿ ನೀಡಿದ ಕಮಿಷನರ್ ಎನ್.ಶಶಿಕುಮಾರ್: ಧಾರವಾಡ ನವಲೂರಿನಲ್ಲಿ ರಾತ್ರೋರಾತ್ರಿ ಮನೆಗೆ ನುಗ್ಗಿ ಮನೆ ದರೋಡೆಗೆ ಪ್ರಯತ್ನಿಸಿ ಮನೆಯವರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ಅಂತರರಾಜ್ಯ ನಟೋರಿಯಸ್ ದರೋಡೆಕೋರನ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಧಾರವಾಡದ ನವಲೂರಿನ ಹೊರವಲಯದಲ್ಲಿರುವ ವಿಕಾಸ್ ಕುಮಾರ್ ಎಂಬುವವರ ಮನೆಗೆ ರಾತ್ರೋರಾತ್ರಿ ದರೋಡೆಗೆ ದರೋಡೆಕೋರರು ಯತ್ನಸಿದ್ದಾರೆ. ಘಟನೆ ನಡೆದ ಕೂಡಲೇ ರೌಂಡ್ಸ್ ನಲ್ಲಿದ್ದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದಾರೆ. ಆರೋಪಿ ಪಾಲಾ ವೆಂಕಟೇಶ್ವರ ಅಲಿಯಾಸ್ ಕಲ್ಯಾಣ ಕುಮಾರ್ ಎಂಬಾತ ಸೆರೆ ಸಿಕ್ಕಿದ್ದಾನೆ. ವಿಚಾರಣೆ ವೇಳೆ ಇನ್ನೂ ಮೂರ್ನಾಲ್ಕು ಜನ ಆತನೊಂದಿಗೆ ಬಂದಿದ್ದಾರೆ ಎಂಬುದನ್ನು ಆರೋಪಿ ತಿಳಿಸಿದ್ದಾನೆ ಎಂದರು.
ಇಲ್ಲಿನ ಇಂಡಸ್ಟ್ರಿಯಲ್ ಏರಿಯಾದ ಗಾರ್ಡನ್ ಸುತ್ತಮುತ್ತ ಬೆಳಗಿನ ಜಾವದಲ್ಲಿ ಅವರು ಸೇರುವ ಮಾಹಿತಿ ಮೇರೆಗೆ ತೆರಳಲಾಗಿತ್ತು, ಈ ವೇಳೆ ಏಕಾಏಕಿ ಹಲ್ಲೆ ಮಾಡಲು ಬಂದು ತಪ್ಪಿಸಿಕೊಂಡು ಹೋಗಲು ಪ್ರಯತ್ನಪಟ್ಟಿದ್ದ ದರೋಡೆಕೋರನ ಕಾಲಿಗೆ ಸ್ಥಳದಲ್ಲೇ ಇದ್ದ ಪಿಎಸ್ಐ ಪ್ರಮೋದ್ ಅವರು ಎರಡು ರೌಂಡ್ ಫೈರಿಂಗ್ ಮಾಡಿದ್ದು, ಸ್ಥಳದಲ್ಲೇ ಬಿದ್ದಿದ್ದಾನೆ ಅಲ್ಲಿಂದ ಕೂಡಲೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದರು.
ಜೂನ್ 6 ನೇ ತಾರೀಖಿನಂದು ಇದೇ ವ್ಯಕ್ತಿ ಅಶೋಕ ಕದಂಬರ ಮನೆಗೆ ನುಗ್ಗಿ ಬಾಗಿಲು ಹೊಡೆದು ಥಳಿಸಿದ್ದರು. ಮನೆಯಲ್ಲಿ ದಂಪತಿಗಳಿಗೂ ಕೂಡಾ ಹಲ್ಲೆ ಮಾಡಿದ್ದರು. ಅದೇ ಪ್ರಕರಣ ಆರೋಪಿ ಅನ್ನೋದು ಕೂಡಾ ಈಗ ತಿಳಿದು ಬಂದಿದೆ. ನಮ್ಮ ರಾಜ್ಯ ಸೇರಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ 50 ಕ್ಕೂ ಹೆಚ್ಚು ಪ್ರಕರಣದಲ್ಲಿ ಈ ಆರೋಪಿ ಭಾಗಿಯಾಗಿದ್ದಾನೆ. ಈತನ ಮೇಲೆ ಆಂಧ್ರದ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಪ್ರಕರಣ ದಾಖಲಾಗಿವೆ. ಪಿಎಸ್ಐ ಪ್ರಮೋದ್ ಹಾಗೂ ಸಿಬ್ಬಂದಿ ಆನಂದ್ ಬಡಿಗೇರ ಅವರಿಗೆ ಸ್ವಲ್ಪ ಗಾಯವಾಗಿದೆ. ಬೇರೆ ಆರೋಪಿಗಳ ಬಗ್ಗೆ ಕೂಡ ವಿಚಾರಣೆ ಮಾಡಲಾಗಿದೆ. ಈತ ಮೂಲತಃ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯವನಾಗಿದ್ದಾನೆ. ಇವರು ವಂಶಾವಳಿಯಾಗಿ ದರೋಡೆಕೋರರು ಆಗಿದ್ದು ಇವರ ಅಪ್ಪ, ಅಜ್ಜ ಸೇರಿ ಎಲ್ಲರೂ ಸಂಪೂರ್ಣ ಡಕಾಯಿತಿ ಮಾಡುತ್ತಿದ್ದರು ಎಂದು ಕಮೀಷನರ್ ಮಾಹಿತಿ ನೀಡಿದರು.